ಮುಂಬಯಿ: ಮಹಾರಾಷ್ಟ್ರದಲ್ಲಿ ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮರಾಠ ಸಮುದಾಯಗಳಿಗೆ ಮೀಸಲಾತಿಗೆ ಆಗ್ರಹಿಸಿ ನಡೆಸುತ್ತಿದ್ದ ಪ್ರತಿಭಟನೆಯನ್ನು ಮರಾಠಾ ಮೀಸಲಾತಿ ಹೋರಾಟಗಾರ ಮನೋಜ್ ಜಾರಂಜ್ ಪಾಟೀಲ್ ಹಿಂಪಡೆದಿದ್ದು, ಏಕನಾಥ್ ಶಿಂಧೆ ನೇತೃತ್ವದ ಸರ್ಕಾರ ತಮ್ಮ ಮನವಿಯನ್ನು ಸ್ವೀಕರಿಸಿದೆ ಎಂದು ಹೇಳಿದ್ದಾರೆ.
ಮಹಾರಾಷ್ಟ್ರ ಸರ್ಕಾರವು ಎಲ್ಲಾ ಬೇಡಿಕೆಗಳನ್ನು ಅಂಗೀಕರಿಸಿದೆ, ಹೀಗಾಗಿ ತಮ್ಮ ಪ್ರತಿಭಟನೆಯನ್ನು ಹಿಂಪಡೆದಿರುವುದಾಗಿ ಮರಾಠ ಕೋಟಾ ಕಾರ್ಯಕರ್ತ ಮನೋಜ್ ಜಾರಂಜ್ ತಿಳಿಸಿದ್ದಾರೆ. ಮುಖ್ಯಮಂತ್ರಿಯವರು ನಮ್ಮ ಮನವಿಗೆ ಸ್ಪಂದಿಸಿದ್ದಾರೆ ಅಲ್ಲದೆ ನಮ್ಮ ಬೇಡಿಕೆಗಳಿಗೆ ಒಪ್ಪಿಗೆಯನ್ನು ಸೂಚಿಸುವ ಮೂಲಕ ನನ್ನ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸುತ್ತಿದ್ದೇನೆ ಅಲ್ಲದೆ ಇಂದು ನಾವು ಮುಖ್ಯಮಂತ್ರಿಗಳಿಂದ ಪತ್ರ ಸ್ವೀಕರಿಸುತ್ತೇವೆ ಬಳಿಕ ಅವರ ಕೈಯಿಂದಲೇ ಜ್ಯೂಸ್ ಕುಡಿಯುವ ಮೂಲಕ ಉಪವಾಸ ಸತ್ಯಾಗ್ರಹವನ್ನು ಕೈಬಿಡಲಿದ್ದೇನೆ ಎಂದು ಹೇಳಿದ್ದಾರೆ.
ತಮ್ಮ ಬೇಡಿಕೆಗೆ ಆಗ್ರಹಿಸಿ ಜನವರಿ 20 ರಂದು ಜಲ್ನಾದಿಂದ ಪ್ರಾರಂಭವಾದ ಕೋಟಾ ಕಾರ್ಯಕರ್ತರ ಪ್ರತಿಭಟನಾ ಮೆರವಣಿಗೆ ಶನಿವಾರ ಮುಂಬೈ ನಗರವನ್ನು ಪ್ರವೇಶಿಸಲು ಸಜ್ಜಾಗುತ್ತಿದ್ದಂತೆ ಅವರ ಘೋಷಣೆ ಹೊರಬಿದ್ದಿದೆ.
ಮಹಾರಾಷ್ಟ್ರ ಸಚಿವ ಮಂಗಲ್ ಪ್ರಭಾತ್ ಅವರು ಶುಕ್ರವಾರ ಪ್ರತಿಭಟನಾಕಾರರನ್ನು ಭೇಟಿ ಮಾಡಿ ಪ್ರತಿಭಟನೆ ನಿಲ್ಲಿಸುವಂತೆ ಮನವಿ ಮಾಡಿದ್ದರು ಅಲ್ಲದೆ ತಮ್ಮ ಬೇಡಿಕೆಗಳನ್ನು ಈಡೇರಿಸುವ ಕುರಿತು ಮಾತು ಕೊಟ್ಟಿದ್ದರು ಎಂದು ಹೇಳಲಾಗಿದೆ.
ಈ ಕುರಿತು ಹೇಳಿಕೆ ನೀಡಿದ ಸಚಿವ ಮಂಗಲ್ ಪ್ರಭಾತ್ ಮರಾಠಾ ಮೀಸಲಾತಿಗಾಗಿ ಮಹಾರಾಷ್ಟ್ರದಲ್ಲಿ ಮನೋಜ್ ಮನೋಜ್ ಜಾರಂಜ್ ಪಾಟೀಲ್ ನೇತೃತ್ವದಲ್ಲಿ ನಡೆಯುತ್ತಿದ್ದ ಆಂದೋಲನಕ್ಕೆ ಇಂದು ಪರಿಹಾರ ಸಿಕ್ಕಿದೆ. ಜಾರಿಗೆ ತಂದಿರುವ ಸುಗ್ರೀವಾಜ್ಞೆಯಲ್ಲಿ ಎಲ್ಲ ಸಮಸ್ಯೆಗಳಿಗೂ ಪರಿಹಾರವಿದೆ ಎಂದು ಹೇಳಿದರು.
ಮೀಸಲಾತಿಯ ಪ್ರಯೋಜನ ಇಡೀ ಸಮುದಾಯಕ್ಕೆ ಲಭ್ಯವಾಗುವವರೆಗೆ ಎಲ್ಲಾ ಮರಾಠರನ್ನು ಸೇರಿಸಲು ಸರ್ಕಾರ ತನ್ನ ಉಚಿತ ಶಿಕ್ಷಣ ನೀತಿಯನ್ನು ತಿದ್ದುಪಡಿ ಮಾಡಬೇಕೆಂದು ಜಾರಂಜ್ ಶುಕ್ರವಾರ ಹೊಸ ಬೇಡಿಕೆಯನ್ನು ಮುಂದಿಟ್ಟರು. ರಾಜ್ಯ ಸರ್ಕಾರ ನೀಡಿರುವ 37 ಲಕ್ಷ ಕುಂಬಿ ಪ್ರಮಾಣಪತ್ರಗಳನ್ನು ನೀಡುವಂತೆ ಕೇಳಿದ್ದಾರೆ. ಕುಂಬಿ, ಕೃಷಿಕ ಸಮುದಾಯವು ಇತರೆ ಹಿಂದುಳಿದ ವರ್ಗಗಳ (ಒಬಿಸಿ) ವರ್ಗಕ್ಕೆ ಸೇರುತ್ತದೆ.
Advertisement